Monday 20 October 2008

ಬದುಕಿದ್ದೂ ಸತ್ತವರು

ನನಗಾಗ ಹೆಚ್ಚುಕಮ್ಮಿ ೧೦ ವರ್ಷ. ಒಂದು ದಿನ ದೇವಾಲಯದಲ್ಲಿ ಭಜನೆ ಮುಗಿಸಿ ಮನೆ ಕಡೆಗೆ ಬರುತ್ತಿದ್ದೆ.ಗೆಳೆಯ ವಿಠಲ ಅವತ್ಥು ಜೊತೆಗಿರಲಿಲ್ಲ.
ಹಿಂದಿನ ದಿನ ರಾತ್ರಿ ಯಾರೋ ಭೂತದ ಬಗ್ಗೆ ಮಾತಾಡುವುದನ್ನು ಕೇಳಿಸಿಕೊಂಡದ್ದಕ್ಕೋ ಏನೋ ಸಿಕ್ಕಾಪಟ್ಟೆ ಹೆದರಿಕೊಂಡು ಬೇಗ ಬೇಗ ಹೆಜ್ಜೆ ಹಾಕುತ್ತಿದ್ದೆ.
ಅಷ್ಟರಲ್ಲಿ ಯಾರೋ ಮಾಣಿ ಇಲ್ಲಿ ಬನ್ನಿ ಎಂದು ಹಿಂದಿನಿಂದ ಕರೆದರು. ನೋಡಿದರೆ ನಮ್ಮ ಮನೆಗೆ ಕೆಲಸಕ್ಕೆ ಬರುವ ಬೊಗ್ರ.
ಸ್ವ್ಲಲ್ಪ ಬೊಗ್ರನ ಬಗ್ಗೆ ಹೇಳಿ ಮತ್ತೆ ಕಥೆ ಮುಂದುವರಿಸೋಣ. ತುಂಬಾ ಸಾಧು ಮನುಷ್ಯ ನಮ್ಮ ಬೊಗ್ರ. ಬೆಳಿಗ್ಗೆ ೮ ಘಂಟೆಗೆ ಬಂದರೆ ಸಾಯಂಕಾಲ ೬ ಘಂಟೆತವರೆಗೆ ಗದ್ದೆ, ತೋಟದ ಕೆಲಸ ಮಾಡುತ್ತಾನೆ.ಒಮ್ಮೆಗೆ ೦.೫ ಕೇಜಿ ಅನ್ನ ತಿನ್ನುತ್ತಾನೆ. ಅಜ್ಜಿ ಹೇಳುತ್ತಿದ್ದರು ಇವನಿಗೆ ಅನ್ನ ಬೇಯಿಸಿ ನಾನು ಬೇಗ ಮುದುಕಿಯಾದೆನೆಂದು.ನಾನೆಂದರೆ ಬೊಗ್ರನಿಗೆ ತುಂಬಾ ಪ್ರೀತಿ. ನನಗೆ ಕಥೆ ಹೇಳುತ್ತಾ, ಹೊಳೆ ಬದಿಗೆ ಕರೆದು ಕೊಂಡು ಹೋಗಿ ಅಲ್ಲಿ ಸಿಗುವ ಹಣ್ಣು ತಿನ್ನಿಸುತ್ತಿದ್ದ.
ಸರಿ ಮರಳಿ ನಮ್ಮ ಮುಖ್ಯವಾಹಿನಿಗೆ ಮರಳಿ ಬರೋಣ. ಬೊಗ್ರ ಕರೆದ ಎಂದು ಹತ್ತಿರ ಹೋದರೆ, ಬೊಗ್ರನಲ್ಲಿ ಏನೋ ನನಗೆ ಗುರಿತಸಲಾಗದ ವ್ಯತ್ಯಾಸ. ಮಾತು ತೊದಲುತ್ತಿದೆ, ಏನೋ ಕೆಟ್ಟ ವಾಸನೆ ಬಾಯಿಯಿಂದ.ಮಾಣಿ ಯಾರಿಗೂ ಹೇಳಬೇಡ. ನಾನು ನಾಳೆ ರಂಗ ಶೆಟ್ರನ್ನು ಕೊಂದು ಹಾಕುತ್ತೇನೆ. ಅವರಿಗೆ ಸುಖ ಕೊಡಲು ದಿನಾ ನನ್ನ ಹೆಂಡತಿಯೇ ಬೇಕು. ಅದೂ ನನ್ನ ಹತ್ರನೇ ಅವಳ ಸೌಂದರ್ಯವನ್ನು ಹೊಗಳುತ್ತಾರೆ.ದುಡ್ಡಿದ್ದರೆ ಏನೊ ಮಡಬಹುದೂಂತ ತಿಳಿದಿದ್ದಾರೆ. ನಾಳೆ ತೋರಿಸುತ್ತೇನೆ ಇವರಿಗೆ ನಾನು ಯಾರೆಂದು. ಅಷ್ಟರಲ್ಲಿ ನಾನು ಹೆದರಿ ಅಲ್ಲಿಂದ ಮನೆಗೆ ಓಡಿ ಬಂದೆ.
ಅಮ್ಮನಿಗೆ ವಿಷಯ ಹೇಳುವವರೆಗೆ ಸಮಾಧಾನವಿರಲಿಲ್ಲ. ಏ ಸುಮ್ಮನಿರು ಅವನು ಕುಡಿದು ಏನೇನೋ ಮತಾಡುತ್ತಾನೆ. ಅದನ್ನು ಇನ್ನು ಯಾರಿಗೂ ಹೇಳಬೇಡ ಎಂದು ಅಮ್ಮ ಸ್ವಲ್ಪ ಜೋರಾಗಿಯೇ ನನ್ನನ್ನು ಗದರಿದರು.
ನನಗೆ ಯಾವಾಗ ಬೆಳಗಾಗುತ್ತದೆ, ಬೊಗ್ರ ಏನು ಮಡುತ್ತಾನೋ ಎಂಬ ಕಾತುರ. ನನ್ನ ಗೆಳೆಯ ವಿಠಲನೊಡನೆ ಬೊಗ್ರನ ಸಂಭಾಷಣೆಯ ಬಗ್ಗೆ ಹೇಳಿ ಅದರ ವಿವರಣೆ ಕೇಳಿದೆ. ಅವನಿಗೂ ಬೊಗ್ರನ ಮಾತು ಅರ್ಥವಾಗಲಿಲ್ಲ.
ಆದರೆ ಬೆಳಿಗ್ಗೆ ಏನೂ ನಡೆಯಲೇ ಇಲ್ಲ. ಅದೇ ದೇವಾಲಯದ ಬಳಿ ಬೊಗ್ರ, ರಂಗ ಶೆಟ್ರ ಮುಂದೆ ಕೈ ಕಟ್ಟಿ ನಿಂತಿದ್ದ. ಅವರು ಏನೋ ಹೇಳುತ್ತಿದ್ದರೆ ಸರಿ ಸ್ವಾಮಿ ಎಂದು ತಲೆ ಆಡಿಸುತ್ತಿದ್ದ. ನನಗೆ ಆಶ್ಚರ್ಯವಾಯಿತು. ಇದೇ ಬೊಗ್ರ ನಿನ್ನೆ ಶೆಟ್ರನ್ನು ಕೊಂದ್ಯು ಹಾಕುವ ಬಗ್ಗೆ ಮಾತಡುತ್ತಿದ್ದ. ಇಂದು ನೋಡಿದರೆ ಸುಮ್ಮನಿದ್ದಾನೆ. ನನಗೆ ಏನೂ ಅರ್ಥವಾಗಲಿಲ್ಲ. ಅಮ್ಮ ಅವನ ಬಗ್ಗೆ ಹೇಳಿದ್ದು ಸರಿ ಅನ್ನಿಸಿತು.
ಸ್ವಲ್ಪ ವರ್ಷ ಕಳೆದ ಮೇಲೆ ನನಗೆ ತಿಳಿಯಿತು ಬೊಗ್ರನ ಮಾತಿನ ಅರ್ಥ. ಅವನ ದುಸ್ಠಿತಿಯ ಬಗ್ಗೆ ಅನುಕಂಪ ಮೂಡಿತು.
ಇದೆಲ್ಲ ಆದದ್ದು ೨೫ ವರ್ಷಗಲ ಹಿಂದೆ. ಕಾಲ ಮತ್ತು ಸಮುದ್ರದ ಅಲೆಗಳು ಯಾರನ್ನು ಕಾಯುವುದಿಲ್ಲ. ನಾನು ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಬೆಂಗಳೂರಿಗೆ ಬಂದೆ. ನನ್ನದೇ ಆದ ಯಾಂತ್ರಿಕ ಜೀವನದಲ್ಲಿ ಬೊಗ್ರ, ಊರು, ಶೆಟ್ರು ಎಲ್ಲಾ ನೆನಪು ಮಸುಕಾಗಿ ಹೋಯಿತು. ಅಮ್ಮನಿಗೆ ಫೋನ್ ಮಾಡಿದಾಗ ಒಮ್ಮೆ ಹೇಳಿದ್ದರು, ಬೊಗ್ರ ಇಹಲೋಕದ ವ್ಯಾಪಾರ ಮುಗಿಸಿದ ಎಂದು. ಅಮ್ಮ ಬೆಂಗಳೂರಿಗೆ ಬಂದ ಮೇಲಂತೂ ಊರಿನ ಸುದ್ದಿ ಹೇಳುವವರು ಯಾರೂ ಇಲ್ಲ.
ಕಳೆದ ಸಲ ಊರಿಗೆ ಅಮ್ಮನನ್ನು ಕರೆದು ಕೊಂಡು ಹೋಗಿದ್ದಾಗ ಯಾರೋ ಮುದುಕ ತುಂಬಾ ಕಷ್ಟ ಪಟ್ಟು ನಡೆದು ಕೊಂಡು ಅದೇ ದೇವಾಲಯದ ಬಳಿ ಹೋಗುತ್ತಿದ್ದ. ಒಂದು ಕಣ್ಣು ಬೇರೆ ಇರಲಿಲ್ಲ ಆ ಮನುಷ್ಯನಿಗೆ.ನನ್ನನ್ನು ನೋಡಿ ನಮಸ್ಕಾರ ಭಟ್ರೆ ಅಂದ. ನೋಡಿದರೆ ಅದೇ ರಂಗ ಶೆಟ್ರು. ಯಾಕೊ ಯಮನಿಗೆ ಇನ್ನು ಕರುಣೆ ಬಂದಿಲ್ಲ ಭಟ್ರೆ ನನ್ನನ್ನು ಇನ್ನೂ ಇಲ್ಲಿಯೇ ಇಟ್ಟು ನರಳಿಸುತ್ತಿದ್ದಾನೆ ಅಂದು ಅತ್ತೇ ಬಿಟ್ಟರು. ಅವರಿಗೆ ಎಲ್ಲಾ ರೀತಿಯ ಖಾಯಿಲೆಗಳು. ಹೆಂಡತಿ ಇವರ ಲೀಲೆಗಳನ್ನು ನೋಡಲಾರದೆ ತುಂಬಾ ವರ್ಷಗಳ ಹಿಂದೆಯೇ ಅತ್ಮಹತ್ಯೆ ಮಾಡಿಕೊಂಡಿದ್ದರು. ವ್ರದ್ದಾಪ್ಯದಲ್ಲಿ ಯಾರೂ ಇಲ್ಲ ಬಳಿಯಲ್ಲಿ.
ಯಾಕೋ ಒಮ್ಮೆಲೆ ನನಗೆ ಬೊಗ್ರನ ನೆನಪಾಯಿತು. ದೇವರು ಇವರನ್ನು ನರಳಿಸಲೋಸ್ಕರ ಅವನ ಕ್ಯೆಯಲ್ಲಿ ಶೆಟ್ರ ಕೊಲೆ ಮಾಡಿಸಲಿಲ್ಲವೇನೋ?

ಆಂತರ್ಯ

ರಾಮಾ ಭಟ್ರು ಪ್ರಸನ್ನ ವದನರಾಗಿಯೇ ದೇವಾಲಯದ ಪ್ರಾಂಗಣದಲ್ಲಿ ನೆಡೆದುಕೊಂಡು ಹೋಗುತ್ತಿದ್ದರು. ಆವತ್ತು ಜಯಶೆಟ್ರು ಮತ್ತು ಕುಟುಂಬದವರ ವಿಶೇಷ ಪೂಜೆ ನಡೆದಿತ್ತು.ದಕ್ಷಿಣೆ, ಮಂಗಳಾರತಿ ತಟ್ಟೆ ಎಲ್ಲಾ ಭರ್ಜರಿಯಾಗಿಯೇ ತುಂಬಿತ್ತು. ಹಾಗಾಗಿ ಮ೦ದಹಾಸ ಮುಖದಲ್ಲಿ ತುಂಬಿ ತುಳುಕುತ್ತಿತ್ತು.ಅಷ್ತರಲ್ಲಿ ರಸಾಭಾಸ. ಕಸಗುಡಿಸುವ ಕೀಳು ಜಾತಿಯ ಗುಲ್ಲಿಯ ೩ ವರ್ಷದ ಮಗ ಸೇಕರ ಓಡಿಬಂದು ಭಟ್ಟರನ್ನು ಮುಟ್ಟಿಬಿಟ್ಟ. ಅಯ್ಯೋ ಅಪಶಕುನ ಮುಂಡೇದೆ ಎಂದು ಬ್ಯೆಯತ್ತಾ ಭಟ್ಟರು ಸ್ನಾನ ಮಾಡಲು ಬಾವಿ ಕಟ್ಟೆಗೆ ನಡೆದರು. ಬಿಡಿ ಭಟ್ರೆ ನಿಮ್ದೇ ಮಗ ಅಲ್ವ ಯಾಕೆ ಅಷ್ಟು ಕೋಪ ಎಂದು ಗುಲ್ಲಿ ರಾಗವಾಗಿ ನುಡಿದಾಗ ಭಟ್ರು ಹೆದರಿ ಅತ್ತಿತ್ತ ನೋಡಿದರು. ಯಾರೂ ಇಲ್ಲ ಬಿಡಿ ನೋಡಿಕೊಂಡೇ ಹೇಳಿದ್ದು ಎಂದು ಗುಲ್ಲಿ ವ್ಯೆಯಾರದಿ ನುಡಿಯಲು ಭಟ್ರು ಉತ್ತರಿಸದೆ ಮುನ್ನಡೆದರು.
ಅಮ್ಮನಿಗೆ ಸಾಯುವಾಗ ಕೊಟ್ಟ ಭಾಷೆಯಂತೆ ಸೋದರ ಮಾವನ ಮಗಳು ಜಾನಕಿಯನ್ನೇ ಮದುವೆಯಾಗಿದ್ದರು ರಾಮಾ ಭಟ್ರು ೪ ವರ್ಷದ ಹಿಂದೆ. ಆದರೆ ಪ್ರಥಮ ರಾತ್ರಿಯೇ ತಿಳಿದು ಹೋಯಿತು ಭಟ್ರಿಗೆ ತನ್ನ ರಸಿಕತೆ ಹೆಂಡತಿಗೆ ಅರ್ಥವಾಗುವುದಿಲ್ಲವೆಂದು. ತಿಂಗಳಿಗೆ ೨೦ ದಿನ ವ್ರತ ಇನ್ನೂ ಹತ್ತು ದಿನ ಬೇರೆ ಕಾರಣದಿಂದ ಜಾನಕಿ ಭಟ್ರಿಗೆ ಸಹಕರಿಸುವುದಿಲ್ಲ. ಸ್ವಭಾವತ ಸಾಧು ಮನುಷ್ಯ ನಮ್ಮ ಭಟ್ರು. ಹಾಗಾಗಿ ಹೆಂಡತಿಯನ್ನು ಜೋರು ಮಾಡಲಾರರು. ಸೋದರ ಮಾವನ ೧೦ ಎಕರೆಯ ಜಮೀನೂ ಕಾರಣವಿದ್ದಿತೊ ಏನೊ?
ಆಸೆಯ ಕಣ್ಣಿನಿಂದ ಕಡೆದ ವಿಗ್ರಹದಂತಿದ್ದ ಗುಲ್ಲಿಯನ್ನೇ ನೋಡುತ್ತಿದ್ದರು ನಮ್ಮ ಕಥಾನಾಯಕ ಭಟ್ರು ಒಂದು ದಿನ. ಜಾಣೆ ಗುಲ್ಲಿಗೆ ಅರಿವಾಯಿತು ಭಟ್ರ ಬಯಕೆ. ಗುಲ್ಲಿಯ ಗಂಡ ರಾಘು ನೀರಿಗಿಂತಲೂ ಶರಾಬು ಜಾಸ್ತಿ ಕುಡಿಯುತ್ತಾನೆ. ಗುಲ್ಲಿಗೂ ಏರು ಯೌವನದ ಬಯಕೆ. ರಾಘು ಮನೆಗೆ ಬರುವುದೇ ಅಪರೂಪ. ಹಾಗೆ ಗುಲ್ಲಿಗೂ ಭಟ್ರ ಬಯಕೆ ತಪ್ಪಾಗಿ ಕಾಣಲಿಲ್ಲ.ಆವತ್ತು ಸಾಯಂಕಾಲವೇ ದೇವಾಲಯದ ಅಡುಗೆ ಕೋಣೆಯಲ್ಲಿ ಸುರುವಾಯಿತು ಭಟ್ರ ಪ್ರೇಮಪಾಠ. ಅದರ ಫಲವೇ ಸೇಖರ. ಬೆಳ್ಳಗೆ ಮುದ್ದಾಗಿದ್ದ ಮಗು ಕೇರಿಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚು.
ಇತ್ತೀಚೆಗೇಕೊ ಭಟ್ರಿಗೆ ಗುಲ್ಲಿಯ ಮೇಲೆ ಅನುಮಾನ. ನಿನ್ನೆ ಹೇಳುತ್ತಿದ್ದಳು ಸೇಕರ ನಿಮ್ಮ ಹಾಗೇ ನಗುತ್ತಾನೆ ಎಂದು. ಎಲ್ಲಾದರು ಇವಳು ಬಾಯಿ ಬಿಟ್ಟರೆ ಮರ್ಯಾದೆ ಹರಾಜಾಗುತ್ತದೆ. ಜಾತಿಯಿಂದ ಬಹಿಷ್ಕಾರವಾಗಬಹುದು. ಆದರೆ ಕತ್ತಲಾಗುತ್ತಿದ್ದಂತೆ ಮನವೆಂಬ ಮರ್ಕಟ ಸುಖ ಅರಸಿಕೊಂಡು ಹೋಗಲೇ ಬೇಕೆಂದು ಒತ್ತಾಯಿಸುತ್ತದೆ. ಈಗೀಗ ಭಟ್ರು ಗುಲ್ಲಿಯ ಮೇಲೆ ಸ್ವಲ್ಪ ರೇಗುತ್ತಾರೆ. ಒಂದೆರಡು ಸಲ ಗುಲ್ಲಿ ಇಲ್ಲ ಒಡೆಯ ನಿಮಗೆಂದಿಗೂ ಮೋಸ ಮಡುವುದಿಲ್ಲ ಎಂದು ಅತ್ತದ್ದೂ ಇದೆ. ಆದರೂ ಭಟ್ರಿಗೆ ಸುಖ ನಿದ್ದೆ ಇಲ್ಲ ಹೆದರಿಕೆಯಲ್ಲಿ.
ರಮೇಶ ಪಿ.ಯು.ಸಿ ಕಲಿತು ಪಟ್ತಣದಲ್ಲಿ ಕೆಲಸಕ್ಕಿದ್ದಾನೆ. ಅವನಿಗೆ ತನ್ನ ಜಾತಿಯವರಿಗೆ ದೇವಾಲಯಕ್ಕೆ ಪ್ರವೇಶ ಕೊಡಿಸ ಬೇಕೆಂಬ ಹಂಬಲ. ಪಡ್ಡೆ ಹುಡುಗರ ಸಹಕಾರ ಬೇರೆ ಇದೆ. ಒಂದೂ ದಿನ ಬೆಳಿಗ್ಗೆ ಗುಂಪು ದೇವಾಲಯಕ್ಕೆ ಬ೦ದೇ ಬಿಡುತ್ತದೆ. ದಯವಿಟ್ಟು ದೇವಾಲಯದ ಒಳಗೆ ಬರಬೇಡಿ ಅಪವಿತ್ರವಾಗಿ ಊರಿಗೆ ಒಳ್ಳೆಯದಾಗಲಿಕ್ಕಿಲ್ಲ ಎಂದು ವಿನಂತಿ ಮಾಡಲು ಪ್ರಾರಂಭಿಸುತ್ತಾರೆ ನಮ್ಮ ಭಟ್ರು. ನೀವು ಗುಲ್ಲಿಯನ್ನು ಮುಟ್ಟಿದರೆ ಅಪವಿತ್ರವಾಗುವುದಿಲ್ಲವೋ ಎಂದು ಅಬ್ಬರಿಸುತ್ತಾನೆ ರಮೇಶ. ಅಲ್ಲಿಗೆ ಭಟ್ರ ದ್ವನಿ ಉಡುಗಲು ಪ್ರಾರಂಭಿಸುತ್ತದೆ. ನನಗೂ ಗುಲ್ಲಿಗೂ ಯಾವ ಸಂಬಧವೂ ಇಲ್ಲ ಎಂದ ಕ್ಷೀಣ ದ್ವನಿಯಲ್ಲಿ ಉಸುರುತ್ತರೆ. ಗುಲ್ಲಿ ನೀನೆ ಹೇಳೆ ಈ ಬಿಳಿ ಮಗು ಯಾರದ್ದೆಂದು ಎಂದು ರಮೇಶ ನುಡಿದಾಗ ಭಟ್ರಿಗೆ ಭೂಮಿಯೇ ಬಾಯಿ ತೆರೆದು ತನ್ನನ್ನು ನುಂಗ ಬಾರದೆ ಎಂದೆನಿಸುತ್ತದೆ.
ಏ ರಮೇಶ ಯಾಕೋ ಬಾಯಿಗೆ ಬಂದ ಹಾಗೆ ಮಾತಾಡ್ತೀಯ.ನಮ್ಮ ರಾಜ ಮೇಷ್ಟ್ರು ಹೇಳಿದ್ದಾರೆ ಕರ್ರಗಿರುವವರಿಗೂ ಬೆಳ್ಳಗಿನ ಮಕ್ಕಳು ಹುಟ್ಟ ಬಹುದೆಂದು. ಏನೋ ತುಂಬಾ ಸಾಲೆಗೆ ಹೋಗಿದ್ಯಂತೆ, ನಿಂಗೆ ಗೊತ್ತಿಲ್ವಾ ಎಂದು ಗುಲ್ಲಿ ನುಡಿದಾಗ, ಭಟ್ರಿಗೆ ಗುಲ್ಲೆ ಮಾನಸಿಕವಾಗಿ ತನಗಿಂತ ತುಂಬಾ ಎತ್ತರದಲ್ಲಿದ್ದಾಳೆನಿಸಿತು.

Sunday 12 October 2008

ದೋಸೆ ಮತ್ತು ಜೀವನ

ಕುಸುಮಕ್ಕ ಒ೦ದು ಹತ್ತು ರುಪಾಯಿ ಸಾಲ ಕೊಡುತೀರಾ ಯಜಮಾನ್ರು ತಿ೦ಗಳ ದುಡ್ಡು ಕಳಿಸಿದ ಕೂಡಲೆ ವಾಪಾಸು ಕೊಡುತ್ತೇನೆ. ನಮ್ಮ್ ರಾಜನಿಗೆ ಸಿಕ್ಕಾಪಟ್ಟೆ ಜ್ವರ.ಜೀರಿಗೆ ಕಶಾಯಕ್ಕೆ ಕಮ್ಮಿ ಆಗ್ಥಾ ಇಲ್ಲ, ಡಾಕ್ರು ಬಳಿ ಕರೆದು ಕೊ೦ಡು ಹೋಗಬೇಕು ಎ೦ದು ರ೦ಗಮ್ಮ ತು೦ಬಾ ಸ೦ಕಟದಿ೦ದ ಕೇಳಿದಾಗ ಕುಸುಮಕ್ಕ ಇಲ್ಲ ಅನ್ನದೆ ದುಡ್ಡು ಕೊಟರು.
ರ೦ಗಮ್ಮ ಕಣ್ಣಲ್ಲಿ ನೀರು ತು೦ಬಿಕೊ೦ಡು ಉಪಕಾರ ಆಯ್ತು ಎನ್ನುತ್ತಾ ಅಲ್ಲಿ೦ದ ಹೊರಟರು.

ಮನೆ ಕಡೆಗೆ ಹೊರಟ ರ೦ಗಮ್ಮ್ನನ ಮನದಲ್ಲಿ ಭಾವನೆಗಳ ತಾಕಲಾಟ. ಮದುವೆಯಾಗಿ ಜೀವನದಲ್ಲಿ ಏನು ಉನ್ನತಿ ಕ೦ಡರೆ೦ದು ಅವರಿಗೆ ಇನ್ನೂ ಅರ್ಥವಾಗಿಲ್ಲ.
ಹಳ್ಳಿಯಲ್ಲಿ ಗ೦ಜಿ ಕುಡಿದುಕೊ೦ದು ಮೈಮುರಿದು ದುಡಿದು ಪಾಲಿಗೆ ಬ೦ದದ್ದೆ ಪ೦ಚಮ್ರತ ಎ೦ದು ಬದುಕುತಿದ್ದವಳನ್ನು ಪೇಟೆಯ ಹುಡುಗ ನಾರಾಯಣನಿಗೆ ಮದುವೆ ಮಾಡಿ ಕೊಟ್ಟರು. ಎಲ್ಲಾ ಹರೆಯದ ಹುಡುಗಿಯರ೦ತೆ ಬಣ್ಣ ಬಣ್ಣದ ಕನಸು ಕಟ್ಟಿ ಕೊ೦ಡು ಹೊಸ ಜೀವನಕ್ಕೆ ಅಡಿ ಇಟ್ಟರು ರ೦ಗಮ್ಮ. ಆದರೆ ಆ ಕನಸಿನ ಬುಗ್ಗೆ ಒಡೆಯಲು ತು೦ಬಾ ಸಮಯ ಹಿಡಿಯಲಿಲ್ಲ.
ನಾರಾಯಣನ ಸ೦ಪಾದನೆಗೆ ದಿನ ಹೋಗುವುದು ಪಟ್ಟಣದಲ್ಲಿ ಕಷ್ಟ, ಆದರೂ ರ೦ಗಮ್ಮ ಎದೆಗು೦ದಲಿಲ್ಲ. ಮೊದಲ ಮಗ ರಾಮು ಹುಟ್ಟಿದಾಗ ನಾರಾಯಣ ಕೆಲಸ ಕಳೆದುಕೊ೦ಡು ಪರಿಸ್ಥಿತಿ ತೀರಾ ಹದಗೆಟ್ಟಿತು. ರ೦ಗಮ್ಮ ಮರಳಿ ತವರುಮನೆಗೆ ಬರಬೇಕಯಿತು. ನಾರಾಯಣ ಪಟ್ಟಣದಲ್ಲೇ ಉಳಿದ. ರ೦ಗಮ್ಮ ವಯಸ್ಸಾದ ಅಪ್ಪ ಅಮ್ಮನ ಸೇವೆ ಮಾಡುತ್ತಾ ದಿನ ಕಳೆಯುತಿದ್ದಳು. ನಾರಾಯಣ ಅವಾಗಾವಾಗ ನಾಲ್ಕು ಕಾಸು ಕಳಿಸುತ್ತಿದ್ದ ಮತ್ತು ಊರಿಗೆ ಬಂದು ಹೋಗುತ್ತಿದ್ದ. ಮಗ ರಾಮು ಅಜ್ಜ ಅಜ್ಜಿ, ನೆರೆಹೊರೆಯವರ ಪ್ರೀತಿಯಲ್ಲಿ ಬೆಳೆಯುತ್ತಿದ್ದ. ಐದು ವರ್ಷದ ನ೦ತರ ಅನು ಹುಟ್ಟಿದಳು.
ತಮ್ಮ೦ದಿರಿಗೆ ಮದುವೆ ಆಗುವವರೆಗೆ ಅಷ್ಟೊ೦ದು ಕೆಟ್ಟದಾಗಿರಲಿಲ್ಲ ಜೀವನ ರಂಗಮ್ಮನಿಗೆ. ಆನ೦ತರ ಸುರುವಾಯಿತು ಸಮಸ್ಯೆಗಳ ಸರಮಾಲೆ. ಅದೂ ಅಪ್ಪ ಅಮ್ಮ ಇಹಲೋಕದ ಯಾತ್ರೆ ಮುಗಿಸಿದ ಮೇಲ೦ತೂ ರ೦ಗಮ್ಮ ನಾದಿನಿಯರಿಗೆ ಪೀಡೆ ಅನ್ನಿಸಿ ಬಿಟ್ಟಳು. ದಿನವೂ ಕಣ್ಣೀರಲ್ಲೇ ಕೈ ತೊಳೆಯಬೇಕಯಿತು. ಎಷ್ಟೋ ಸಲ ಅತ್ಮಹತ್ಯೆಯ ಆಲೋಚನೆ ಬ೦ದಿತ್ತು. ಮಕ್ಕಳ ಮುಖ ನೋಡಿ ಬದುಕುತ್ತಿದ್ದರು. ಇದ್ದ ಒ೦ದೇ ಆಸರೆ ಕುಸುಮಕ್ಕ. ಅವರಿಲ್ಲದಿದ್ದರೆ ಜೀವನ ಇನ್ನೂ ದುಸ್ತರವಾಗುತ್ತಿತ್ತು.
ಮೊದಲನೇ ತಮ್ಮ ಮತ್ತವನ ಹೆ೦ಡತಿ ಬೇರೆ ಮನೆ ಮಾಡಿದ ಮೇಲೆ ಈಗ ಮನೆಯಲ್ಲಿ ೨ನೇ ತಮ್ಮನ ಹೆ೦ಡತಿ ಗ೦ಗಾಳದ್ದೇ ಎಲ್ಲ ಕಾರುಬಾರು. ಅವಳು ಬೇರೆಯೆ ಅಡುಗೆ ಮಾಡುತ್ತಾಳೆ. ತಮ್ಮನಿಗೆ ಸರಕಾರಿ ಕೆಲಸ. ಹಾಗಾಗಿ ರುಚಿ ರುಚಿಯಾದ ಅಡುಗೆ ಅವರಿಗೆ. ರ೦ಗಮ್ಮನಿಗೆ ಗ೦ಜಿಗೆ ಬೇಕದಷ್ತು ಸ೦ಪಾದನೆ ಮಾಡುವುದೇ ದೊಡ್ಡ ಸಾಹಸ.
ಮಟ ಮಟ ಮದ್ಯಾಹ್ನ. ಹೊಟ್ಟೆ ಚುರುಗುಟ್ಟುತಿದೆ. ರಾಮು ಮತ್ತು ಅನುವಿಗೆ ಗ೦ಜಿ ಬಡಿಸುತ್ತಿದಾರೆ ರ೦ಗಮ್ಮ. ಅನು ಪಾಪ ಇನ್ನು ೪ ವರ್ಷದ ಮಗು. ಅದು ಆಸೆಯಿ೦ದ ಗ೦ಗ ಮತ್ತವಳ ಗ೦ಡ ತಿನ್ನುತ್ತಿದ್ದ ದೋಸೆಯನ್ನೆ ನೋಡುತ್ತಿತ್ತು. ಗ೦ಗ ಮಗು ಎ೦ಬ ಕರುಣೆಯಿಲ್ಲದೆ ಅನುವನ್ನು ರೇಗಿಸಿ ನಗುತ್ತಿದ್ದಳು. ಮೊದಲೆ ತು೦ಬ ಸ್ವಾಭಿಮಾನಿ ರ೦ಗಮ್ಮ. ಬಡತನಕ್ಕೆ ಯಾವಗಲು ಸಿಟ್ಟು ಜಾಸ್ತಿ. ಅಲ್ಲೇ ಇದ್ದ ಪೊರಕೆ ಎತ್ತಿಕೊ೦ಡು ಅನುವಿಗೆ ಬಾರಿಸಲು ಪ್ರಾರ೦ಭಿಸಿದರು. ಅಡ್ಡ ಬ೦ದ ರಾಮುವಿಗೂ ಬಿತ್ತು ಏಟು.
ಅಷ್ತ್ಟರಲ್ಲಿ ರಾಮು ಜೇಬಿನಿ೦ದ ಹತ್ತು ರೂಪಯಿ ತೆಗೆದು ಕೊಟ್ಟು ಹೇಳಿದ ಇದು ನನಗೆ ಶಾಲೆಯಲ್ಲಿ ಭಾಷಣ ಸ್ಪರ್ಧೆಯಲ್ಲಿ ಇವತ್ತು ಸಿಕ್ಕಿದ ಬಹುಮಾನ. ಈ ದುಡ್ಡಲ್ಲಿ ದೋಸೆ ಮಾಡು ಅದರೆ ದೋಸೆಗೊಸ್ಕರ ನನ್ನ ತ೦ಗಿಯನ್ನು ಕೊ೦ದು ಹಾಕಬೇಡ ಅಂದಾಗ ರಂಗಮ್ಮ ಅಲ್ಲೇ ಕುಸಿದು ಕುಳಿತರು.

ಹಾಗೇ ಸುಮ್ಮನೆ

ಗೆಳೆಯರೇ

ಭಾವನೆಗಳನ್ನು ಹಂಚಿಕೊಳ್ಳೋಣ. ಎದೆಯ ಭಾರವನ್ನಿಳಿನಿಕೊಳ್ಳೋಣ ಎಂಬ ಸದುದ್ದೇಶದಿಂದ ಈ ಬ್ಲಾಗ್ ಪ್ರಾರಂಭಿಸಿದ್ದೇನೆ.

About Me

My photo
ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಬದುಕುತ್ತಿರುವ ನಿರುಪದ್ರವಿ ಮಾನವ ಪ್ರಾಣಿ